ಗುರುವಾರ, ಜೂನ್ 10, 2021

ಡಾ||ಗಿರೀಶ.ರ.ಮಸೂರಕರ್

 


                           ಅದೊಂದು ದಿನ ಮಧ್ಯಾಹ್ನ 3 ಗಂಟೆ ಆಸುಪಾಸು. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ನನ್ನ ಫೋನ ರಿಂಗಣಿಸಿತು. ನಾನು ಹಲೋ ಸರ್‌ ಅಂದೆ , ಆ ಕಡೆಯಿಂದ “ನೆರೆ ಬಂದಾಗ ನಾವು ನಮ್ಮವರಿಗೆ ಹೊರಗಿನವರಾಗಲಿಲ್ಲ” ಭಾರಿ ಛೊಲೋ ಬರದಿಯೋ ಆರ್ಟಿಕಲ್, ಹಿಂಗ ಬರೀತೀರು ಅಂದ್ರು .ಆ ದ್ವನಿ ಗುರುತಿಸಿಯ ನಾನು ಥ್ಯಾಂಕೂ ಸರ್‌ ಅಂತ ಮಾತ್ರ ಅಂದೆ ,ನನಗೆ ಮುಂದೆ ಮಾತೇ ಹೊರಡಲಿಲ್ಲ . ನಾನು ಫೇಸಬುಕ್‌ ನಲ್ಲಿ ಹಂಚಿಕೊಂಡಿದ್ದ ಲೇಖನವನ್ನ ಓದಿ ನನಗೆ ಕರೆ ಮಾಡಿದ್ದವರು ಡಾ||ಗಿರೀಶ.ರ.ಮಸೂರಕರವರು. ಇವರನ್ನು ಹತ್ತಿರದಿಂದ ಕಂಡು  ಇವರ ಬಗ್ಗೆ ಬರೆಯುವದು ಅದೊಂದು ಪುಣ್ಯದ ಕೆಲಸ ಮತ್ತೆ ಅವರು ಪ್ರೊತ್ಸಾಹಿಸಿದರಿಂದಲೇ ಅವರ ಬಗ್ಗೆ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ. ತಪ್ಪಿದ್ದಲ್ಲಿ ಮನ್ನಿಸಬೇಕು.

                       ದೊಡ್ಡ ವ್ಯಕ್ತಿಯಾದರು ಎಲ್ಲರೊಂದಿಗೆ ಬೆರೆಯುವ ಗುಣ, ತಮ್ಮದೇ ತಪ್ಪು ಎಂದು ಅರಿವಾದ ಮೇಲೆ ಎಂತಹ ಚಿಕ್ಕ ವ್ಯಕ್ತಿಯೇ ಇರಲಿ ಅವರಿಗೆ ಕ್ಷಮೆ ಕೇಳುವ ಇವರ ದೊಡ್ಡ ಗುಣ ಇವರನ್ನ ಇನ್ನಷ್ಟು ದೊಡ್ಡ ವ್ಯಕ್ತಿಯನ್ನಾಗಿಸುತ್ತದೆ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ ಕೂಡ. ಅವರು ಪ್ರತಿ ಬಾರಿ ರೋಗಿಗಳೊಂದಿಗೆ ಆಗಲಿ ಅಥವಾ ಆಸ್ಪತ್ರೆ ಸಿಬ್ಬಂದಿಯವರೊಂದಿಗೆಯಾಗಲಿ ವ್ಯವಹರಿಸುವದನ್ನ ಕಂಡಾಗ ನನಗೆ ತಲೆಯಲ್ಲಿ ಈ ಮಾತು ಮಿಂಚಿನಂತೆ ಓಡುತ್ತದೆ.

“He know how to deal with creatures of emotioņ creatures bristling with prejudices and motivated by pride and vanity better than you and I”

ಇವತ್ತಿಗೂ ರೋಗಿ ಯಾವುದೇ ಸಮಯಕ್ಕೆ ಬರಲಿ , ಸಹಾಯ ಕೇಳಿಕೊಂಡು ಯಾರೆ ಬರಲಿ ಅವರನ್ನ ಕುಳ್ಳಿರಿಸಿ, ಅವರ ಜೊತೆ ಮಾತನಾಡಿ ಸಹಾಯ ಮಾಡಿ ಕಳುಹಿಸುತ್ತಾರೆ. ಯಾರಾದರು ಏನಾದರೂ ತಪ್ಪು ಮಾಡಿದರೆ ಅವರಿಗೆ ತಿಳಿ ಮಾತುಗಳನು ಹೇಳಿ ಅವರ ತಪ್ಪನ್ನ ಮನ್ನಿಸಿಬಿಡುತ್ತಾರೆ. ಮನ್ನಿಸಿ ಬಿಡುವುದೇತಕ್ಕೆ ? ಅಂತ ನಿಮಗನ್ನಿಸಬಹುದು. ಅವರು ತಪ್ಪೇಕಾಯಿತು? ಯಾರಿಂದಾಯಿತು? ಅವರಿಗೇನಾಯಿತು? ಎಂದು ಕೂಲಂಕುಶವಾಗಿ ವಿಚಾರಿಸಲು,ಚರ್ಚಿಸಲು ಅವರನ್ನ ಕ್ಷಮಿಸಿಬಿಡುತ್ತಾರೆ.ಅದಕ್ಕೆ ಆಂಗ್ಲಭಾಷೆಯಲ್ಲಿ ಆ ಮಾತು ಹೊರಟಿರೋದು  To know all is to forgive all” and he also praise his staff publicly as well as privately. ಇದಕ್ಕೆ ನನ್ಹಿಡಿದುಕೊಂಡು ಉಳಿದ ಸಿಬ್ಬಂದಿಯವರು ಕೂಡ ಸಾಕ್ಷಿ.     

                        ನಾನು ಡಾ || ಗಿರೀಶ.ರ.ಮಸೂರಕರ ಅವರನ್ನ ಯಾವುದೇ ಸ್ಥಾನದ , ಸಮಾಜದ ಅಧ್ಯಕ್ಷರಾಗಿ ನೋಡಿಯೇ ಇಲ್ಲ. ನಾನು ಅವರನ್ನ ನೋಡಿದ್ದು ,ಕಂಡಿದ್ದು ಒಬ್ಬ ವೈದ್ಯನಾಗಿ ಅದರಲ್ಲಿ ಬಡರೋಗಿಗಳಿಗೆ ಮಿಡಿಯುವ ಅವರ ಅಂತಃಕರಣವನ್ನ. ಅದೇಕೋ ಗೊತ್ತಿಲ್ಲ ನಾನವರನು ಪ್ರತಿ ಬಾರಿ ನೋಡಿದಾಗ ಆ ಒಂದು ಘಟನೆ ನೆನಪಾಗುತ್ತದೆ. ಪ್ರಾಯಶಃ ಈ ಘಟಿತ ಘಟನೆಯನ್ನ ಘಟ್ಯಾಗಿ ಸಂಗ್ರಹಿಸಲಿಡಲೇನೋ ಗೊತ್ತಿಲ್ಲ. ಈ ಘಟನೆಯನ್ನ ಅವರು ಮರೆತಿರಬಹುದು ನಾನದನ್ನ ಮರೆಯಲು ಸಾಧ್ಯವೇ ಇಲ್ಲ ಅಷ್ಟು ಅಚ್ಚೊತ್ತಿದೆ ನನ್ನ ತಲೆಯಲ್ಲಿ.

ಆ ದಿನ

                    ಎಂದಿನಂತೆ ಅಂದೂ ಕೂಡ ಪೇ಼ಶಂಟ ಬಹಳ ಸಂಖ್ಯೆಯಲ್ಲಿದ್ದರು. ನಾನು ಅವರಿಗೆ ಬಂದಿದ್ದ  ಪಾರ್ಸಲ್‌ ಒಂದನ್ನು ಕೊಡಲು ಅವರ ತಪಾಸಣಾ ಕೋಣೆಗೆ ಹೋದೆ. ಪಾರ್ಸಲ್‌ ಕೊಟ್ಟ ನಂತರ ನಾನು ಹೊರಗಡೆ ಹೋಗಬೇಕೆಂದುಕೊಂಡೆ ಆದರೆ ಅವರ ಕೋಣೆಯಲ್ಲಿ ಆಸ್ಪತ್ರೆ ಸಿಬ್ಬಂದಿಯಿರಲಿಲ್ಲ ಆದ ಕಾರಣ ಅಲ್ಲೇ ನಿಂತೆ.ಅವರು ಒಂದು ಹಣ್ಣಾದ ಅಜ್ಜಿಯನ್ನ ಪರೀಕ್ಷೆ ಮಾಡುತ್ತಿದ್ದರು. ಆ ಅಜ್ಜಿಯ ಕಣ್ಣಿಗೆ ಪೊರೆ ಬಂದಿತ್ತು. ಆಪರೇಶನ್‌ ಮಾಡಿಸಬೇಕಮ್ಮ , ಯಾರ ಬಂದಾರ ನಿನ್ನ ಜೊತಿ ? ಅಂತ ಕೇಳಿದ್ರು .ಆಗ ಆಕೆ ಯಾರು ಬಂದಿಲ್ಲ ಸಾಹೆಬ್ರ ನಾ ಒಬ್ಬಾಕೆ ಬಂದೀನಿ ಅಂದ್ಲು . ಸರಿ ಆಪರೇಶನ್‌ ಮಾಡಬೇಕಾದ್ರ ಯಾರನಾದರು ಕರಕೊಂಡು ಬರಬೇಕು ನೋಡು ಅಂದ್ರು. ಸರಿ ಸಾಹೇಬ್ರ ಕರಕೊಂಡ ಬರ್ತೀನಿ ಅಂದ್ಲು. ಮತ್ತ ಸಾಹೇಬ್ರ ಆಪರೇಶನ್‌ಕ್ಕ ಎಷ್ಟ ಖರ್ಚ ಬರ್ತೈತ್ರಿ ಅಂದ್ಲು? ನೋಡವಾ ಅವು ಲೆನ್ಸ ಮ್ಯಾಲ್‌ ರೊಕ್ಕ ಇರ್ತಾವು  ಅಂದ್ರು . ಅಜ್ಜಿ 2 ನಿಮಿಷ ಸುಮ್ಮನಾಗಿ ಮ್ಯಾಲೆ ಮುಖ ಎತ್ತಿದಾಗ ಆಕೆಯ ಕಣ್ಣಿನಲ್ಲಿ ನೀರು ಧರಧರ ಹರಿಯುತ್ತಿತ್ತು. ಅಜ್ಜಿ ಕೈ ಮುಗಿದು “ ಎಪ್ಪಾ ನನ್ನ ನೋಡಕೊಳ್ಳವರು ಯಾರು ಇಲ್ಲ ? ಮಕ್ಕಳಿದ್ದರು ಯಾರು ನೋಡ್ಕೋಳ್ಳಾಂಗಿಲ್ಲಾ....ಎನ್ನುತ್ತಾ ಅಳು ಜೋರಾಗಿ ಮಾತು ಬಂದಾಯಿತು. ಹೋಗ್ಲಿ ನಿಂಗ ಎಷ್ಟ ಕೊಡಲಿಕ್ಕಾಗ್ತದ ಹೇಳು ರೊಕ್ಕಾ ? ಅಂದ್ರು. ಗದ್ಗದಿತಾಳಗಿಯೇ ಅಜ್ಜಿ ತನ್ನ ಮಾಂಗಲ್ಯ ಮುಟ್ಟಿದಳು. ತಕ್ಷಣವೇ ಅವರಿಗೆ ಅರ್ಥವಾಗಿ ಹೋಯಿತು. ಇವಳು ತನ್ನ ಮಾಂಗಲ್ಯ ಮಾರಿ ತಂದ ಹಣದಿಂದ ಆಪರೇಶನ್‌ ಮಾಡಲು ಇವರಿಗೆ ಮನಸ್ಸಾಗಲಿಲ್ಲ . ಅಜ್ಜಿಗೆ ಈಗ ಇವು ಟೆಸ್ಟ ಮಾಡಿಸಿಕೊಂಡು ಹೋಗು ,ಎಲ್ಲಾ ಬರೋಬ್ಬರಿ ಇತ್ತು ಅಂದ್ರ ನಾ ಇಂಥಾ ದಿವಸ ಅಂತ ಹೇಳ್ತೀನಿ ಬಂದ ಆಪರೇಷನ್‌ ಮಾಡಿಸಿಕೊಂಡು ಹೋಗು ಅಂತ , ಅಜ್ಜಿನ ಲ್ಯಾಬಿಗೆ ಕಳುಹಿಸಿದರು. ಆ ಅಜ್ಜಿ ರಿಪೋರ್ಟ  ಎಲ್ಲಾ ನಾರ್ಮಲ್‌ ಬಂದು , ಹೇಳಿದ ದಿನದಂದು ಬಂದು ಆಪರೇಶನ್‌ ಮಾಡಿಸಿಕೊಂಡು ಮನೆಗೆ ಹೋಗುವಾಗ ಅವರಿಗೆ ಎರಡು ಕೈಮುಗಿದು ಕೃತಜ್ಞತೆ ಸಲ್ಲಿಸಿ ಹೋದ್ಲು. ಅವಳಿಂದ ಒಂದು ನಯಾ ಪೈಸೆಯನ್ನು ಕೂಡ ಅವರು ತೆಗೆದುಕೊಳ್ಳಲಿಲ್ಲ . ದೊಡ್ಡವರ ಸನಿಹದಲ್ಲಿದ್ದಾಗ ಅವರ ಚಿಕ್ಕ ಚಿಕ್ಕ ನಡೆಗಳಿಂದ ಹೇಗೆ ದೊಡ್ಡ ವ್ಯಕ್ತಿಯಾದರು ಎಂಬುದು ನಮಗರಿವಾಗುತ್ತದೆ.

                                 60 ತುಂಬಿದರು ಅವರಿನ್ನು ನವಯುವಕರಂತೆ ಓಡಾಡುತ್ತಾರೆ. ಒಂದು ಕೆಲಸ ಮಾಡಿ ಉಸ್ಸೆಂದು ಕೂಡುವ ನಾವುಗಳು ಅವರಿಂದ ಕಲಿಯುವದು ಬಹಳಷ್ಟಿದೆ. ಒಂದೇ ದಿನದಲ್ಲಿ 12 ರಿಂದ 5ರ ವರೆಗೆ ರೋಗಿಗಳನ್ನ ತಪಾಸಿಸುತ್ತಾರೆ. ಇಂದಿಗೂ ಅವರು ಎಲ್ಲ ರೋಗಿಗಳ ಕುಳಿತ ಕುರ್ಚಿ ಖಾಲಿಯಾದ ಮೇಲೇನೆ ಅವರು ತೆರಳೋದು. ನಂತರ ಊಟ ಅಥವಾ ಉಪಹಾರ ಸ್ವೀಕರಿಸಿ ,ಮತ್ತೇ ಎಷ್ಟು ಸಮಯವಾದರು ಸರಿ  ತಮ್ಮ ತಾಯಿಯವರ ಆರೋಗ್ಯ ವಿಚಾರಿಸಲು ಮುಧೋಳಕ್ಕೆ ತೆರಳುತ್ತಾರೆ. ಮತ್ತೇ ಆಸ್ಪತ್ರೆ ಸಿಬ್ಬಂದಿಯೊಡನೆ ಸಮಾಲೋಚನೆ , ನಾವು ಮಾಡುವ ಹಾಸ್ಯ ವಿನೋದಗಳಲ್ಲಿ ಕೂಡ ಅವರು ಭಾಗಿಯಾಗುತ್ತಾರೆ. ನಾನೇನಾದರು ರಜೆ ಹಾಕಿದರೆ, ರಜೆ ಮುಗಿಸಿ ಮರುದಿನ ಹೋದಾಗ “ ಸಾಹಿತ್ಯ ಬರೀಲಿಕ್ಕೆ ರಜಾ ಹಾಕಿದ್ದೇನೋ” ಅಂತ ಕೇಳುತ್ತಾರೆ.

                              ಇಂಥವರ ಜೀವನದಿಂದ ನಾವು ಒಂದು ಬಿಂದುವಿನಷ್ಟಾದರು ಅನುಸರಿಸಿದರು.ನಾವು ನಿಸ್ಸಂಶಯವಾಗಿ ಮೇಲ್ಬರುತ್ತೇವೆ. ದೊಡ್ಡವರು ಯಾಕೆ ಆ ಪಥವನ್ನು ಹಿಡಿದರು ಎಂದು ವಿಷ್ಲೇಶಿಸುತ್ತಾ ಹೊರಟರೆ ಅವರು ನಡೆದ ಹಾದಿಯನ್ನ ನಾವು ಅಲ್ಪಸ್ವಲ್ಪವಾದರು ಸರಿ ಊಹಿಸಬಹುದು. “To know all is to forgive all”  ಈ ನಡೆಯನ್ನ ನಾವು ಅನುಸರಿಸೋಣ. ಹಿರಿಯರು ಕೂಡ ಕಿರಿಯರನ್ನ ಅವಲೋಕಿಸಲಿ. ಇಂದಿಗೆ 60 ತುಂಬಿದ ತಮಗೆ ಜನ್ಮದಿನದ ಶುಭಾಶಯಗಳು ಕೋರುತ್ತಾ ,ನಿಮಗೆ ಉಡುಗೊರೆ ಕೊಡುವಷ್ಟು ದೊಡ್ಡವನಲ್ಲ ಆದ್ದರಿಂದ ನನ್ನ ಈ ಬರಹವನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ,  ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇನೆ.

ಯತ್ಸಾರಭೂತಂ ತದುಪಾಸನೀಯಂ

-HRK

                        

 

ಬುಧವಾರ, ಜೂನ್ 9, 2021

ತಾಳಿ

 


                 ತಾಳಿ

               ಹುಡುಗಿ ನಮ್ಮಕಡೆಯವಳು ,ವರ ಕರಾವಳಿ ಭಾಗದವ .ತಾವೇ ತಿಳಿಸಿದ ಶುಭ ಮಹೂರ್ತದಲ್ಲಿ ವಿವಾಹ ಕಾರ್ಯ ನೆರವೇರಿಸುತ್ತಿದ್ದಾರೆ ಪುರೋಹಿತರು.ಎಲ್ಲ ಸ್ತ್ರೀಯರು ಮಂಗಳಸೂತ್ರವನ್ನ ಸ್ಪರ್ಶಿಸಿ ʼಅಖಂಡ ಸೌಭಾಗ್ಯವತಿಯಾಗಲಿ ಎಂದು ಹರಸುತ್ತ ವರನ ಕೈಗೆ ಮಾಂಗಲ್ಯವಿತ್ತರು.ಪುರೋಹಿತರು ಕಣ್ಣು ಮುಚ್ಚಿ ಮಂತ್ರ ಹೇಳುತ್ತಾ ʼತಾಳಿʼ ಎಂದರಂತೆ. ಪುರೋಹಿತರು ʼಮಾಂಗಲ್ಯಂತಂತುನಾನೇನ...ಅಂತ ಮಂತ್ರ ಉಚ್ಚರಿಸತೊಡಗಿದರು ,ಹೊರಗಡೆ ತಾಳಮೇಳಗಳ ನಾದ. ಆದರೆ ವರ ಮಾತ್ರ ಮಂಗಳಸೂತ್ರ ವಧುವಿಗೆ ಕಟ್ಟುತ್ತಿಲ್ಲ.

               ಎಲ್ಲರಿಗೂ ಚಿಂತೆ ಆಶ್ಚರ್ಯ ಏಕಕಾಲಕ್ಕೆ ಆಗತೊಡಗಿತು.ಕೆಲವರು ಹುಡುಗನಿಗೆ ಬಹುಶಃ ಮದುವೆ ಇಷ್ಟವಿಲ್ಲ ಅಂತ ಕಾಣುತ್ತೆ. ವರೋಪಚಾರ ಸರಿಯಾಗಿ ಮಾಡಿಲ್ಲ ಅಂತ ಕಾಣುತ್ತೆ ಅದಕ್ಕೆ ತಾಳಿ ಕಟ್ಟುತ್ತಿಲ್ಲರಿ ಪದ್ಮಾ ವೈನ್ಸಾ ಅಂತ ಮೂಲ್ಯಾಗ ಕುತ್ತಿದ್ದ ಸಂಧ್ಯಾ ವೈನಿ ಅಂದ್ಲು.ವಧುಗಂತೂ ಎಲ್ಲಾ ಬರೋಬ್ಬರಿ ಇತ್ತಲಾ ಏನಾತ ಇವರಿಗೆ ? ಲೌ ಮಾಡಲಿಕ್ಕೆ ಸಾಧ್ಯನೇ ಇಲ್ಲ ನಾ ಬಿದ್ದಿದ್ದ ದೊಡ್ಡದಿವರಿಗೆ (ಐ ಮೀನ್‌ ನಾ ಸಿಕ್ಕಿದ್ದ ದೊಡ್ಡದು).ಅಕಿನು ಚಿಂತಿ ಮಾಡಲೆಕತ್ತಿದ್ದಲು. ಕನ್ಯಾ ಅಲ ಸೋ ಗಾಂಭಿರ್ಯತೆ ಕಾಪಾಡಕೋಬೇಕಂತ ಸುಮ್ಮನಿದ್ದಲು.ಮದುವೆ ಭಾರ ಹೊತ್ತಿದ್ದ ವಧುವಿನ ಅಣ್ಣ ತಮ್ಮ ಇಬ್ಬರಿಗೂ ಮರ್ಯಾದೆ ಸರಿಯಾಗಿಲ್ಲಂತ ಕಾಣತದ ಅದಕ ಇವರು ಮಂಗಳಸೂತ್ರ ಕಟ್ಟವಲ್ಲರು ತಡಿರಿ ಹೋಗೆ ಕ್ಷಮೆ ಕೇಳೂನ ಅಂತ ವರನ ತಂದೆ ಕಡೆ ಹೋಗಿ ಕೇಳಿದ್ರು ಅವರು ಏನಿಲ್ಲರಿ ಎಲ್ಲಾ ಬರೋಬ್ಬರಿ ಛೊಲೋ ಮಾಡಿರಿ . ಆದರೆ ನನ್ನ ಮಗನೇಕೋ ಮಂಗಳಸೂತ್ರ  ಕಟ್ಟುತ್ತಿಲ್ಲ ಎಂಬುದು ನನಗೂ ಅರ್ಥವಾಗುತ್ತಿಲ್ಲ ತಡೆಯಿರಿ ಕೇಳುತ್ತೇನೆ ಅನ್ನುವಷ್ಟರಲ್ಲಿ .ವಧುವಿನ ಪಕ್ಕದಲ್ಲೇ ನಿಂತಿದ್ದ ಕಳಸಗಿತ್ತಿ ಚಿಂತಾಮಣಿಗೆ ತನ್ನ ಜೀರಗಿಗಂಟ ಕದ್ದರೊಕ್ಕ ಎಲ್ಲೆ ಕೈತಪ್ಪಿ ಹೋಗ್ತದಂತ ಚಿಂತಿ ಮಾಡ್ಕೋತ ಜೋರಾಗಿ “ಈ ಪುರೋಹಿತರು ಶಾಸ್ತ್ರ ಸರಿಯಾಗಿ ಮಾಡಿಸಿಲ್ಲ ಅದಕ್ಕೆ ಅವರು ಮಾಂಗಲ್ಯ ಕಟ್ಟುತ್ತಿಲ್ಲ” ಎಂದು ಬಿಡೋದೆ!. ಅಲ್ಲಿಯವರೆಗೆ ಸುಮ್ಮನೆ ಕುತ್ತಿದ್ದ ಪುರೋಹಿತರಿಗೆ ಸಿಟ್ಟು ಆವರಿಸಿತು ʼ ಏನಮ್ಮ ನೀನು ಇಲ್ಲಿಯವರೆಗೆ ನೂರಾರು ಮದುವೆಗಳನ ಮಾಡಿದೇನೆ ಯಾರು ಹೀಗಂದಿರಲಿಲ್ಲʼ ಎನ್ನುತ್ತಾ ವರನ ಕಡೆ ತಿರುಗುತ್ತಾ ಏನಯ್ಯಾ ನಿನ್ನ ಪ್ರಾಬ್ಲಮ್‌ ಯಾಕ ಕಟ್ಟತಾ ಇಲ್ಲ ಮಾಂಗಲ್ಯನ? ಕೇಳಿದರು . 

                     ಎಲ್ಲರೂ ಒಂದು ಕ್ಷಣ ಮೌನ. ಎಲ್ಲರೂ ವರನ ಕಡೆಯೆ ನೋಡುತ್ತಿದ್ದಾರೆ.ಆಗ ವರ ಅಲ್ಲಾ ಪುರೋಹಿತರೆ ಎಲ್ಲವೂ ಗೊತ್ತಿದ್ದು ನೀವೇ ಹೀಗೆ ಕೇಳುತ್ತಿದ್ದಿರಲ್ಲ ಎಂದ. ನಾನೇನಯ್ಯ ಮಾಡಿದೆ ? ನನಗೇನು ಗೊತ್ತು ಎಂದರು ಪುರೋಹಿತರು. ವರ “ತಾಳಿ ಅಂತೀರಿ ಮಾಂಗಲ್ಯಧಾರಣ ಮಂತ್ರನೂ ಅಂತೀರಿ,ತಾಳಿ ಅಂತೀರಿ ಮಾಂಗಲ್ಯಧಾರಣ ಮಂತ್ರನೂ ಅಂತೀರಿ!! ಹೀಗಾದ್ರೆ ನಾ ಹೇಗೆ ಮಂಗಳಸೂತ್ರ ಕಟ್ಟೋದು?? ಹೇಳಿ ನೋಡೋಣ. ಅಲ್ಲಿಯವರೆಗೆ ಗಾಂಭಿರ್ಯತೆಯಿಂದ ಕೂತಿದ್ದ ವಧು ಘೊಳ್ಳೆಂದು ನಗತೊಡಗಿದಳು.ಪುರೋಹಿತರು ಹಣಿ ಹಣಿ ಚಚ್ಚಿಕೊಂಡರು.ಅಲ್ಲಿದ್ದವರಿಗೆ ನಗಬೇಕೋ ಅಳಬೇಕೋ ಅಂತ ಗೊತ್ತಾಗಲಿಲ್ಲ . ಪುರೋಹಿತರು ಸರಿ ನಂದೇ ತಪ್ಪು ಮಹರಾಯ ಸರಿ ಈಗ ತಾಳಿ ಕಟ್ಟು ಮತ್ತೆ ಹಣೆ ಚಚ್ಚಿಕೊಳ್ಳುತ್ತಾ ಅಲ್ಲಲ್ಲಾ ಮಂಗಳಸೂತ್ರ ಕಟ್ಟು ಮಹರಾಯ ಅನ್ನುತ್ತಾ ಮಾಂಗಲ್ಯ ಕಟ್ಟಿಸಿದರು. ವಧುವಿಗ ಮಾತ್ರ ನಗು ಎಲ್ಲೂ ನಿಲ್ಲುತ್ತಿಲ್ಲ.ಸಂಶಯ ಪಟ್ಟಿದ್ದ ಸಂಧ್ಯಾಮಾಮಿ ಶೋಭಾಗ ಮೊಣಕೈಲೇ ತಿವಿದ ನಡ್ರೀ ಸ್ಪೆಷಲ್‌ ಸ್ವೀಟ ಏನ ಮಾಡ್ಯಾರ ನೋಡುನ ಅಂದ್ಲು.ಹೀಗೆ ಅನೇಕ ಊಹಾಪೂಹಗಳನ ಮಾಡಿ ತಲಿಕೆಡಸಿಕೊಂಡಿದ್ದ ಮಂದಿ ತಮ್ಮ ತಮ್ಮ ಮುಖ ನೋಡಕೊಂಡರು. ಎಲ್ಲ ಶಾಸ್ತ್ರಗಳು ಮುಗದಮ್ಯಾಲೆ ವಧು-ವರರು ಪುರೋಹಿತರು ಆಶೀರ್ವಾದ ತೊಗೊಂಡ್ರು,ಇವರ ಹಿಂದ ನಿಂತಿದ್ದ ನಮ್ಮ ಚಿಂತಾಮಣಿ ಮುಂದ ಬಂದು ಆಶೀರ್ವಾದ ತೊಗೊಂಡ್ಲು.ಪುರೋಃಇತರಿಗೆ ಅಕಿ ಮ್ಯಾಲೆ ಇನ್ನು ಸಿಟ್ಟ ಇಳದಿರಲಿಲ್ಲ ಆವರು ಎರಡು ಕೈ ಮೇಲೆತ್ತಿ “ ನಿನಗು ಇವನಂಥಾ ವರ ಸಿಗಲಿ “ ಅಂತ ಆಶೀರ್ವಾದ ಮಾಡಿದ್ರು. ಇದು ವಧು ಕಿವಿಗೂ ಬಿತ್ತು ,ಅಕಿ ಇನ್ನಷ್ಟು ಜೋರಾಗಿ ನಗಲಿಕ್ಕೆ ಶುರು ಮಾಡಿದ್ಲು. ಈ ಥರದ ಆಶೀರ್ವಾದ ಪಡೆದ ಚಿಂತಾಮಣಿ ಚಿಂತಿಸುತ್ತಲೇ ಊಟದ ಮನೆಗೆ ನಡೆದಳು.ತಮ್ಮ ಮಗಳನ್ನ ಗಂಡನ ಮನೆಗೆ ಕಳಸೋ ಸಮಯ ಬಂತು ಹುಡುಗಿಯ ತಂದೆ ತಾಯಿ ಕಣ್ಣಿನ ಕೋಡೆಯೆ ಹರಿಸುತ್ತಿದ್ದರು. ಆಕೆಯ ಅಣ್ಣ ಅಳು ಬಂದರೂ ತಡೆದುಕೊಂಡಿದ್ದ ಆದರೆ ಅವಳ ತಮ್ಮ ಮಾತ್ರ ಅಳು ತಡೆಯಲಾರದೆ ಬಿಗಿದಪ್ಪಿ ಅಳುತ್ತಿದ್ದ. ಆದರೆ ವಧುವಿನ ಮೊಗದಲ್ಲಿ ಅಳುವಿಗಿಂತ ಜಾಸ್ತಿ ನಗೂನೇ ತುಂಬಿತ್ತು. ನಗುವಿಗೆ ಕಾರಣ ಅವಳಿಗೆ ತಿಳಿಯದಾಗಿತ್ತು.ಗಂಡನ ಮೇಲೆ ನಗುತ್ತಿದ್ದೇನೋ? ಸಂಬಂಧಿಕರ ಮೇಲೆ ನಗುತ್ತಿದ್ದೇನೋ ,ಪುರೋಹಿತರು,ಕಳಸಗಿತ್ತಿ ಚಿಂತಾಮಣಿ ಮೇಲೆ ನಗೂನೋ? ಎಂದು.

                      ಇದು ಕೇವಲ ಕಾಲ್ಪನಿಕ. ಮದುವೆ ಬಗ್ಗೆ ಎನಾದರೂ ಬರೆಯಬೇಕೆಂಬ ತಲೆಯಲ್ಲಿ ಕೆರೆದು ಕೊಳ್ಳುವಾಗ ಹೊಳೆದಿದ್ದಿದು.ಆದ್ದರಿಂದ ಅನ್ಯಥಾ ಭಾವಿಸಬಾರದು,ಹಾಸ್ಯವನ್ನ ಹಾಸ್ಯವಾಗಿ ಸ್ವೀಕರಿಸುತ್ತಿರಿ ಎಂದು ಭಾವಿಸಿದ್ದೇನೆ.

 

ಯತ್ಸಾರಭೂತಂ ತದುಪಾಸನೀಯಂ

-HRK

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...