ಪ್ರೀತಿಯೆಂದರೆ ರಾಧೆ ಕೃಷ್ಣರ ಪ್ರೀತಿಯಲ್ಲ, ಕೃಷ್ಣ ರುಕ್ಮಿಣಿಯರ ಪ್ರೀತಿ. ಸತ್ಯಭಾಮ ಕೃಷ್ಣರ ಪ್ರೀತಿ. ಕಟ್ಟಿಕೊಂಡ ಹೆಂಡತಿ ಕಡೆಯವರೆಗು ನನ್ನೊಟ್ಟಿಗೆ ಇರುವಳೋ ಇಲ್ಲವೋ, ಅದೇ ರೀತಿ ಕಟ್ಟಿಗೊಂಡ ಗಂಡ ನನ್ನೊಟ್ಟಿಗೆ ಇರುವನೋ ಇಲ್ಲವೋ? ಚಟಕ್ಕೆ ದಾಸನಾಗಿ ಬಿಟ್ಟು ಹೋಗುವನೋ ಎಂಬ ಭೀತಿಯಲ್ಲಿ ಬದುಕುತ್ತಿದೆ ಇಂದಿನ ಜನತೆ.
ಮದುವೆಯ ಮುಂಚೆ ಪ್ರೇಮದ ಬಗ್ಗೆ ಮಾತನಾಡುವ ನಾವು, ರಾಧೆ-ಕೃಷ್ಣರ ಉದಾಹರಣೆಯನ್ನ ತೆಗೆದುಕೊಳ್ಳುತ್ತೇವೆ ಆದರೆ ಮದುವೆಯ ನಂತರ ಯಾರ ಉದಾಹರಣೆ ನಾವು ತೆಗೆದುಕೊಳ್ಳುತ್ತೇವೆ? ಯಾರ ಆದರ್ಶವಿಟ್ಟುಕೊಂಡು ಬದುಕುತ್ತಿದ್ದೇವೆ? ಹೀಗೆ ನೀರಸದತ್ತ ಸಾಗುತ್ತಿದೆ ನಮ್ಮ ಬದುಕು. ಸಂಸಾರದಲ್ಲಿ ತುಂಟಾಟವಿರಬೇಕು ,ಹಾಸ್ಯದ ಹೊನಲು ಹರಿಯಬೇಕು ಪರಸ್ಪರ ಮಾಡುವ ಕೆಲಸದಲ್ಲಿ ಹೊಂದಾಣಿಕೆ ಇರಬೇಕು. ಅಂದರೆ ತಾನೆ ಸಂಸಾರದಲ್ಲಿ 'ಸಾರ'ಭೂತವನ್ನ ತೆಗೆಯಲಿಕ್ಕಾಗುವುದು!
ನನ್ನಮ್ಮ ಆವಾಗವಾಗ ಒಂದು ಹಾಡನ್ನು ಹಾಡುತ್ತಾಳೆ. ಅವಳಿಗೂ ಅಷ್ಟು ಆ ಹಾಡು ನೆನಪಿನಲ್ಲಿ ಉಳಿದಿಲ್ಲ. ಅದನ್ನು ಅಷ್ಟೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಇದು ಸತ್ಯಭಾಮ ಮತ್ತು ಶ್ರೀಕೃಷ್ಣರ ಸಂವಾದ.
ಕಾಂತಾ ನಿನ್ನ ಮುಖವನು ಈಗ ಮುಂದೆ ತಿರುಗಿಸು ಬೇಗ ಮತ್ತೆ ಹಿಂದೆ ತಿರುಗಿಸು ಬೇಗ...
ಕೃಷ್ಣರಾಯರೆ ನಿಮ್ಮ ಒಪ್ಪುವ ತುಟಿಗೆ ಬಣ್ಣನ್ಯಾಕ ಹತ್ಯದ ಮತ್ತೆ ಗೀರನ್ಯಾಕ ಮೂಡ್ಯಾವ...
ಜಂಬು ನೇರಳೆ ಹಣ್ಣು ತಿನ್ನುವಾಗ ತುಟಿಗೆ ಹತ್ಯದ ಭಾಮಿನಿ ಅದು ಬಣ್ಣವಲ್ಲವೇ ಭಾಮಿನಿ.
ಕೃಷ್ಣರಾಯರೆ ನಿಮ್ಮ ಒಪ್ಪುವ ಗಲ್ಲಕೆ ನತ್ತನ್ಯಾಕ ನಟ್ಟದ ಆಮ್ಯಾಲೆ ಗೀರನ್ಯಾಕ ಮೂಡ್ಯದ...
ಅರ್ಥಿಲಿ ಶಂಖ ಹಿಡಿದು ಊದುವಾಗ ಒತ್ತಿ ನಟ್ಟದ ಭಾಮಿನಿ ಅದು ನತ್ತನಲ್ಲವೇ ಭಾಮಿನಿ
ಕೃಷ್ಣರಾಯರೆ ನಿಮ್ಮ ಒಪ್ಪುವ ಪೀತಾಂಬರಕೆ ಬಣ್ಣನ್ಯಾರು ಹಾಕ್ಯಾರ ಮತ್ತ ರಂಗನ್ಯಾರ ಚೆಲ್ಯಾರ?
ವಸಂತಕಾಲ ಓಕುಳಿ ಆಡ್ಯಿನೇ ಭಾಮಿನಿ ಅದು ಬಣ್ಣನಲ್ಲವೇ ಭಾಮಿನಿ
ಕೃಷ್ಣರಾಯರೆ ನಿಮ್ಮ ಒಪ್ಪುವ ಬೆನ್ನಿಗೆ ಹೆರಳನ್ಯಾಕ ಮೂಡ್ಯದ ಮತ್ತ ಗೀರನ್ಯಾಕ ಮೂಡ್ಯಾವ?
ಕ್ಯಾದಿಗೆ ಬನದಾಗ ಸುಳಿದು ಬರುವಾಗ ಗರಿಯ ತಾಕ್ಯದ ಭಾಮಿನಿ ಅದು ಹೆರಳನಲ್ಲವೇ ಭಾಮಿನಿ.
ಕೃಷ್ಣರಾಯರೆ ನೀವು ಯಮುನಾ ತೀರಕೆ ಹೋದ ಕಾರಣವೇನು ?ಅಲ್ಲಿ ನಿಂತ ಕಾರಣವೇನು?
ಕೆಂಚಿಯರೆಲ್ಲ ಕಂಚಿನ ಕೊಡವ ಹೊರಿಸು ಎಂದರೆ ಭಾಮಿನಿ, ಪುರಂದರ ವಿಠ್ಠಲನ ದಯದಿಂದ ಹೊರೆಸಿ ಬಂದೆನೆ ಭಾಮಿನಿ.
(ಅಲ್ಲಲ್ಲಿ ಶಬ್ದ,ಸಾಲು ದೋಷಗಳಿವೆ ಅದಕ್ಕೆ ಕ್ಷಮೆಯಿರಲಿ.)
ಹೀಗೆ ಪತಿ ಪತ್ನಿಯರ ನಡುವೆ ಹಾಸ್ಯ,ತುಂಟತನವಿರಬೇಕು, ವಿನೋದದ ಮಾತುಗಳಿರಬೇಕು. ಯದ್ಯಪಿ ಕೃಷ್ಣ ಪರಮಾತ್ಮನ ಮಹಾತ್ಮ್ಯ ಸತ್ಯಭಾಮಳಿಗೂ ಗೊತ್ತು. ತನ್ನ ಪತಿಯನ್ನ ಬಯಸುವವರು ಅನಂತ ಜೀವರುಗಳು ಅಂತ. ಹದಿನಾರು ಸಾವಿರ ಮೇಲ್ಪಟ್ಟು ಪತ್ನಿಯರನ್ನು ಹೊಂದಿದ್ದ ಕೃಷ್ಣನೂ ಪ್ರತಿಯೊಬ್ಬರೊಂದಿಗೆ ಸಮಯ ಕಳೆಯುತ್ತಿದ್ದ. ಒಬ್ಬ ಪತ್ನಿ ಮನೆಯಲ್ಲಿ ಊಟವಾದರೆ , ಮತ್ತೊಬ್ಬರ ಮನೆಯಲ್ಲಿ ತಾಂಬೂಲ ಮೆಲ್ಲುತ್ತಿದ್ದ, ಹೀಗೆ ಪ್ರತಿಯೊಬ್ಬರ ಮನೆಯಲ್ಲಿಯು, ಪ್ರತಿಯೊಬ್ಬರಿಗೂ ಸಮಯ ಕೊಡುತ್ತಿದ್ದ. ಆದರೆ ಇಂದು ಏನಾಗಿದೆ ಕಟ್ಟಿಕೊಂಡ ಒಬ್ಬ ಹೆಂಡತಿಗೆ ಸಮಯ ಕೊಡಲಿಕ್ಕಾಗುತ್ತಿಲ್ಲ. ಇನ್ನು ಕೃಷ್ಣನ ಕಂಡು 2-3 ಮದುವೆಯಾಗುವ ಮಹಾನುಭಾವರು ಇದ್ದಾರೆ, ಆದರೆ ಅವನಿಂದ ಪಾಠ ಕಲಿಯಬೇಕಾದದ್ದು ಇದಲ್ಲ ಕಟ್ಟಿಕೊಂಡ ಒಬ್ಬ ಹೆಂಡತಿಗೆ ಪ್ರೀತಿ ತೋರಿಸದರೆ ಸಾಕು. ಕೃಷ್ಣನಿಂದ ಪ್ರೀತಿ ಮಾಡುವದನ್ನ ಕಲಿಯಬೇಕು ವಿನಃ ಕೃಷ್ಣನಂತೆ ಮದುವೆಯಾಗುವದಲ್ಲ. ಅವನು ದೇವರು, ಅವನು ಅನಂತ ,ಅನಂತ ಪತ್ನಿಯರಿಗೆ ಅನಂತವಾಗಿ ಸುಖ ಕೊಡಬಲ್ಲವ ಆದರೆ ನಾವು ದೇವರಾಗಲು ಸಾಧ್ಯವೇ? ದೇವರಂತೆ ವರ್ತಿಸಲು ಸಾಧ್ಯವೇ? ಹಾಗಂತ ಹತಾಶರಾಗಬೇಕಿಲ್ಲ. ನಾವೆಲ್ಲ ದೇವರ ಮಕ್ಕಳು ಅನಂತ ಶಕ್ತಿಯನ್ನು ಹೊಂದಿರುವ ದೇವರ ಮಕ್ಕಳು ನಾವು . ನಮಗೂ ದೇವರು ಶಕ್ತಿ,ಯುಕ್ತಿ, ಸಾಮರ್ಥ್ಯ ಕೊಟ್ಟಿದ್ದಾನೆ . ಅದನ್ನ ಸದುಪಯೋಗ ಪಡಿಸಿಕೊಳ್ಳೋಣ ತಂದೆ,ತಾಯಿ, ಪತ್ನಿ,ಮಕ್ಕಳಲ್ಲಿ ಪ್ರೀತಿ ತುಂಬೋಣ. ದೇವರ ಮಕ್ಕಳೆಂದು ಖುಷಿಯಿಂದ ಬದುಕೋಣ.
Take what is useful discard what is not.